ಬಂಟ್ವಾಳ: ಮಂಗಳೂರಿನಲ್ಲಿ ಹೈಕೋರ್ಟು ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆಗಾಗಿ ಸಮಿತಿ ರಚಿಸುವುದಾಗಿ ಭರವಸೆ ನೀಡಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಧು ಭಖ್ರು ಅವರು ಅಗತ್ಯವಿದ್ದರೆ ಖುದ್ದು ತಾನೇ ಭೇಟಿ ನೀಡಿ ಲಭ್ಯವಿರುವ ಮೂಲಸೌಕರ್ಯ ಮತ್ತು ಹೆಚ್ಚುವರಿ ಆಗತ್ಯಗಳ ಕುರಿತು ವರದಿ ಪಡೆಯುವುದಾಗಿ ಅವರನ್ನು ಭೇಟಿಯಾದ ಮಂಗಳೂರಿನ ವಕೀಲರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಮಂಗಳೂರಿನ ಹಿರಿಯ ವಕೀಲರು,ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್. ವಿ. ರಾಘವೇಂದ್ರ ರಾವ್ ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಎಂ. ಡಿಕೋಸ್ಟ ಅವರನ್ನೊಳಗೊಂಡ ನಿಯೋಗವು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಧು ಭಖ್ರು ಅವರನ್ನು ಭೇಟಿಯಾಗಿ ಕರಾವಳಿ ಕರ್ನಾಟಕದಲ್ಲಿ ಶಾಶ್ವತ ಹೈಕೋರ್ಟು ಪೀಠ ಸ್ಥಾಪನೆ ಆಗುವ ತನಕ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ನ್ಯಾಯಾಮೂರ್ತಿಗಳು ಈ ಬಗ್ಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಳಿಕ ಹೊರಾಟ ಸಮಿತಿಯ ನಿಯೋಗ ಜಿಲ್ಲೆಯ ಅಡಳಿತಾತ್ಮಕ ನ್ಯಾಯಧೀಶರಾದ ಎಚ್. ಟಿ. ನರೇಂದ್ರ ಪ್ರಸಾದ್ ಹಾಗೂ ದ.ಕ.ಜಿಲ್ಲೆಯವರೇ ಆದ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ನ್ಯಾಯಧೀಶರು ಸಕರಾತ್ಮಕವಾಗಿ ಸ್ಪಂದಿಸಿ, ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಸಂದರ್ಭ ಹೈಕೋರ್ಟ್ ವಕೀಲರಾದ ಅಜೇಯ್ ಮೆಟ್ರಿಕ್ ನೊರೊನ್ಹಾ ಜೊತೆಗಿದ್ದರು.
ಕರಾವಳಿ ಪ್ರದೇಶದಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪನೆಗೆ ಬಹುಕಾಲದಿಂದ ಬೇಡಿಕೆ ಇದ್ದು,ಈಗಾಗಲೇ ಶಾಶ್ವತ ಹೈಕೋರ್ಟ್ ಪೀಠ ಹೋರಾಟ ಸಮಿತಿ ರಚಿಸಲಾಗಿ ಹಲವಾರು ಸಭೆಗಳು ವಿವಿಧ ಹಂತದ ಹೋರಾಟ ,ಪ್ರಾಧಿಕಾರಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆಯಲ್ಲದೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಅಬ್ದುಲ್ ನರ್ಜಿರ್ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಮಾರ್ಗದರ್ಶನವನ್ನು ಪಡೆದಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅವರು ಮಂಗಳೂರಿನಲ್ಲಿ ಶೀಘ್ರವಾಗಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.